ದಕ ಜಿಲ್ಲೆ: ಕೊವಿಡ್ ನಿಯಂತ್ರಿಸಲು 50ಕ್ಕಿಂತ ಅಧಿಕ ಸಕ್ರಿಯ ಪ್ರಕರಣಗಳು ಇರುವ ಗ್ರಾ.ಪಂ. ಗಳನ್ನು ಸೀಲ್ಡೌನ್ ಮಾಡಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ

ದಕ ಜಿಲ್ಲೆ: ಕೊವಿಡ್ ನಿಯಂತ್ರಿಸಲು 50ಕ್ಕಿಂತ ಅಧಿಕ ಸಕ್ರಿಯ ಪ್ರಕರಣಗಳು ಇರುವ ಗ್ರಾ.ಪಂ. ಗಳನ್ನು ಸೀಲ್ಡೌನ್ ಮಾಡಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ 


ಕೋವಿಡ್ ಸೋಕಿನ ಪ್ರಮಾಣ ಕಡಿಮೆಗೊಳಿಸುವ ಸಲುವಾಗಿ ದ.ಕ. ಜಿಲ್ಲೆಯ 17 ಗ್ರಾಪಂಗಳನ್ನು ಜೂ.14ರಿಂದ ಬೆಳಗ್ಗೆ 9 ಗಂಟೆಯಿಂದ 21ರ ಬೆಳಗ್ಗೆ 9 ಗಂಟೆಯವರೆಗೆ ಸೀಲ್ಡೌನ್ ಮಾಡಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ.


ದ.ಕ.ಜಿಪಂ ಸಿಇಒ ಅವರ ವರದಿ ಆಧರಿಸಿ 50ಕ್ಕಿಂತ ಅಧಿಕ ಕೋವಿಡ್ ಸಕ್ರಿಯ ಪ್ರಕರಣಗಳು ಇರುವ ಗ್ರಾಪಂಗಳನ್ನು ಸೀಲ್ಡೌನ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಅದರಂತೆ ಮಂಗಳೂರು ತಾಲೂಕಿನ ಕೊಣಾಜೆ ಮತ್ತು ನೀರುಮಾರ್ಗ, ಬೆಳ್ತಂಗಡಿ ತಾಲೂಕಿನ ನಾರಾವಿ, ಕೊಯ್ಯೂರು, ಮಿತ್ತಬಾಗಿಲು, ಮಾಲಾಡಿ, ನೆರಿಯ, ಲಾಯಿಲ, ಉಜಿರೆ ಮತ್ತು ಚಾರ್ಮಾಡಿ ಮುಂದಿನ ಒಂದು ವಾರಗಳ ಕಾಲ ಸೀಲ್ ಡೌನ್ ಆಗಲಿವೆ. ಅದಲ್ಲದೆ ಸುಳ್ಯ ತಾಲೂಕಿನ ಐವರ್ನಾಡು, ಅಮರ ಮುಡ್ನೂರು, ಕೊಲ್ಲಮೊಗರು, ಗುತ್ತಿಗಾರು, ಅರಂತೋಡು, ಕಡಬ ತಾಲೂಕಿನ ಸುಬ್ರಮಣ್ಯ ಹಾಗೂ ಸವಣೂರು ಸಹಿತ 17 ಗ್ರಾಪಂಗಳು ಸೀಲ್‌ಡೌನ್ ಆಗಲಿದೆ.


ಈ 17 ಗ್ರಾಪಂಗಳಿಗೆ ಹೊರಗಿನಿಂದ ಬರುವವರು ಮತ್ತು ಅಲ್ಲಿಂದ ಹೊರಗೆ ಹೋಗುವವರಿಗೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಅಲ್ಲದೆ ನರ್ಸಿಂಗ್ ಹೋಂ, ಕ್ಲಿನಿಕ್, ಲ್ಯಾಬ್, ಟಲಿಮೆಡಿಸಿನ್, ರಕ್ತ ಸಂಗ್ರಹ ಕೇಂದ್ರ ಇತ್ಯಾದಿ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಕೆಎಂಎಫ್ ಹಾಲಿನ ಬೂತ್ ಮತ್ತು ರಾಜ್ಯ, ರಾಷ್ಟ್ರ ಹೆದ್ದಾರಿ ಪಕ್ಕದ ಪೆಟ್ರೋಲ್ ಬಂಕ್‌ಗಳನ್ನು ತೆರೆಯಬಹುದು.


ವೈದ್ಯಕೀಯ ಮತ್ತು ಇತರ ತುರ್ತು ಅಗತ್ಯ ಸೇವೆಗೆ ವಾಹನ ಓಡಾಟಕ್ಕೆ ಅನುಮತಿ ನೀಡಲಾಗುತ್ತದೆ. ಗ್ರಾಮಸ್ಥರಿಗೆ ಅಗತ್ಯ ವಸ್ತುಗಳ ಪೂರೈಕೆಗೆ ಗ್ರಾಮಪಡೆಗಳು ಕ್ರಮ ವಹಿಸಲಿದ್ದಾರೆ. ಕೊರೋನ ಸೋಂಕು ತಗ್ಗಿಸಲು ಕೆಲವು ಕಠಿಣ ನಿರ್ಧಾರ ಕೈಗೊಳ್ಳುವುದು ಅಗತ್ಯವಾಗಿದ್ದು, ನಾಗರಿಕರು ಸಹಕರಿಸಬೇಕು ಎಂದು ಜಿಪಂ ಸಿಇಒ ಡಾ.ಕುಮಾರ್ ಮನವಿ ಮಾಡಿದ್ದಾರೆ.


ಸೂಚನೆ: ಮನೆಯಲ್ಲಿರಿ ಆರೋಗ್ಯವಾಗಿರಿ, ಜಿಲ್ಲೆ ಇನ್ನೂ ಲಾಕ್ ಆಗಿದೆ.   

أحدث أقدم