ಹದಿನೈದು ತಿಂಗಳ ಸುದೀರ್ಘ ಪ್ರತಿಭಟನೆ ಕೊನೆಗೊಳಿಸಲು ರೈತ ಸಂಘ ನಿರ್ಧಾರ

ಹದಿನೈದು ತಿಂಗಳ ಸುದೀರ್ಘ ಪ್ರತಿಭಟನೆ ಕೊನೆಗೊಳಿಸಲು ರೈತ ಸಂಘ ನಿರ್ಧಾರ 

ಹೊಸದಿಲ್ಲಿ: ಈಗ ರದ್ದಾಗಿರುವ ಕೃಷಿ ಕಾನೂನುಗಳು ಹಾಗೂ ಕನಿಷ್ಠ ಬೆಂಬಲ ಬೆಲೆಯ (ಎಂಎಸ್‌ಪಿ) ಕಾನೂನಾತ್ಮಕ ಖಾತರಿ ಸೇರಿದಂತೆ ಇತರ ವಿಷಯಗಳ ಕುರಿತಾಗಿ 15 ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಡಿಸೆಂಬರ್ 11 ರ ಶನಿವಾರದಂದು ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸುವುದಾಗಿ ಘೋಷಿಸಿದ್ದಾರೆ. ಶನಿವಾರದಿಂದ ತಮ್ಮ ಮನೆಗಳಿಗೆ ವಾಪಸಾಗಲಿದ್ದಾರೆ.

ರೈತ ಸಂಘಗಳು ಇಂದು ಸಂಜೆ 5:30 ಕ್ಕೆ ಫತೇಹ್ ಅರ್ದಾಸ್ (ವಿಜಯ ಪ್ರಾರ್ಥನೆ) ಹಾಗೂ ಡಿಸೆಂಬರ್ 11 ರಂದು ಬೆಳಿಗ್ಗೆ 9 ಗಂಟೆಗೆ ದಿಲ್ಲಿಯ ಗಡಿಯಲ್ಲಿರುವ ಸಿಂಘು ಮತ್ತು ಟಿಕ್ರಿ ಪ್ರತಿಭಟನಾ ಸ್ಥಳಗಳಲ್ಲಿ ಫತೇಹ್ ಮಾರ್ಚ್ (ವಿಜಯ ಮೆರವಣಿಗೆ) ಯೋಜಿಸಿವೆ ಎಂದು ಮೂಲಗಳು ತಿಳಿಸಿವೆ.


ಪಂಜಾಬ್ ರೈತ ನಾಯಕರು ಡಿಸೆಂಬರ್ 13 ರಂದು ಅಮೃತಸರದ ಗೋಲ್ಡನ್ ಟೆಂಪಲ್‌ಗೆ ಪೂಜೆ ಸಲ್ಲಿಸಲು ಯೋಜಿಸಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ ಅಥವಾ ಎಸ್‌ಕೆಎಂ ಡಿಸೆಂಬರ್ 15 ರಂದು ದಿಲ್ಲಿಯಲ್ಲಿ ಮತ್ತೊಂದು ಸಭೆ ನಡೆಸಲಿದೆ.


ನವೆಂಬರ್ 21 ರಂದು ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ)ನಿಂದ ಆರು ಬೇಡಿಕೆಗಳನ್ನು ಪಟ್ಟಿ ಮಾಡಿ ಪ್ರಧಾನಿ ಮೋದಿಗೆ ಪತ್ರ ಬರೆದ ನಂತರ ಕೇಂದ್ರ ಸರಕಾರವು ನಿನ್ನೆ ಎಸ್‌ಕೆಎಂನ ಐದು ಸದಸ್ಯರ ಸಮಿತಿಗೆ ಲಿಖಿತ ಕರಡು ಪ್ರಸ್ತಾವನೆಯನ್ನು ಕಳುಹಿಸಿದೆ. ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದು ತಾವು ಎತ್ತಿದ ಹಲವಾರು ಬೇಡಿಕೆಗಳಲ್ಲಿ ಒಂದಾಗಿದೆ ಎಂದು ರೈತರು ಗಮನಸೆಳೆದಿದ್ದರು


Previous Post Next Post