ವಿರೋಧ, ಗದ್ದಲದ ಮಧ್ಯೆಯೇ ವಿಧಾನಸಭೆಯಲ್ಲಿ 'ಮತಾಂತರ ನಿಷೇಧ' ವಿಧೇಯಕ ಪಾಸ್

ವಿರೋಧ, ಗದ್ದಲದ ಮಧ್ಯೆಯೇ ವಿಧಾನಸಭೆಯಲ್ಲಿ 'ಮತಾಂತರ ನಿಷೇಧ' ವಿಧೇಯಕ ಪಾಸ್ 


ಬೆಳಗಾವಿ: ವಿಧಾನಮಂಡಲ ಅಧಿವೇಶ ಶುರುವಾದಗಿನಿಂದ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಮತಾಂತರ ನಿಷೇಧ ವಿಧೇಯಕವನ್ನು (Anti Conversion Bill) ವಿಧಾನಸಭೆಯಲ್ಲಿ ಪಾಸ್​ ಮಾಡಿಕೊಳ್ಳುವಲ್ಲಿ ಬಹುಮತ ಹೊಂದಿರುವ ಬಿಜೆಪಿ ಸರ್ಕಾರ ಸಫಲವಾಗಿದೆ.


ವಿರೋಧ ಪಕ್ಷಗಳ ತೀವ್ರ ವಿರೋಧ, ಗದ್ದಲದ ಮಧ್ಯೆಯೂ ಧ್ವನಿಮತದ ಮೂಲಕ ವಿಧೇಯಕವನ್ನು ಅಂಗೀಕರಿಸಲಾಯಿತು. ವಿಧೇಯಕದ ಮೇಲಿನ ಚರ್ಚೆ ವೇಳೆ ಕಾಂಗ್ರೆಸ್​ ನಾಯಕರು ಹಾಗೂ ಸರ್ಕಾರದ ಮಧ್ಯೆ ತೀವ್ರ ವಾಕ್ಸಮರ ನಡೆಯಿತು. ಕಾಂಗ್ರೆಸ್ ಸದಸ್ಯರು ಸದನದ ಬಾವಿಗಳಿದು ಪ್ರತಿಭಟನೆ ನಡೆಸಿದ್ದರ ನಡುವೆಯೇ ವಿಧಾನಸಭೆಯಲ್ಲಿ ಮತಾಂತರ ನಿಷೇಧ ಕಾಯಿದೆ ಅಂಗೀಕಾರಗೊಂಡಿತು. ಕಾಯಿದೆ ಅಂಗೀಕಾರದ ಬಳಿಕ 10 ನಿಮಿಷಗಳ ಕಾಲ ಸದನವನ್ನು ಸ್ಪೀಕರ್ ಕಾಗೇರಿ ಮುಂದೂಡಿದರು.


ಬಿಜೆಪಿ-ಕಾಂಗ್ರೆಸ್​ ಮಧ್ಯೆ ಜಟಾಪಟಿ

ವಿಧೇಯಕ ಅಂಗೀಕಾರಕ್ಕೂ ಮುನ್ನ ವಿಪಕ್ಷ ನಾಯಕ ಸಿದ್ದರಾಮಯ್ಯ ವಿಧೇಯಕವನ್ನು ಕಟುವಾಗಿ ಟೀಕಿಸಿದ್ದರು. ಈ ಕಾನೂನಿನ ಹಿಂದೆ ಯಾವುದೋ ಕಾಣದ ಕೈಗಳು ಇವೆ ಎಂದರು. ಆ ಕಾಣದ ಕೈಗಳು ನಿಮಗೆ ಪ್ರಭಾವ ಬೀರ್ತಾ ಇದ್ಯಾ ಎಂದು ಈಶ್ವರಪ್ಪ ಪ್ರಶ್ನಿಸಿದರು. ಇದರಲ್ಲಿ ಕಾಣದ ಕೈಗಳು ಇಲ್ಲ, ಇದನ್ನು ನಾವೇ ತಂದಿದ್ದೇವೆ ಎಂದು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಸಮರ್ಥಿಸಿಕೊಂಡರು. ಇದಕ್ಕೆ ಒಪ್ಪದ ಸಿದ್ದರಾಮಯ್ಯ, ಇದು RSSನ ಹಿಡನ್ ಅಜೆಂಡಾ. ಅವರಿಗಾಗಿಯೇ ಈ ಕಾಯಿದೆ ತರಲಾಗಿದೆ ಎಂದು ಆರೋಪಿಸಿದರು. ಈ ವೇಳೆ ಸಿದ್ದು ಮೇಲೆ ಗರಂ ಆದ ಮಾಜಿ ಸಿಎಂ ಯಡಿಯೂರಪ್ಪ, ಸಿದ್ದರಾಮಯ್ಯನವರೇ ನೀವು ವಿರೋಧ ಪಕ್ಷದ ನಾಯಕರಾಗಿದ್ದೀರಿ. ನೂರಕ್ಕೆ‌ ನೂರು ನೀವು ಹೇಳೋದು ಸರಿ ಇದೆ. ಹಿಂದೆ ಅವರು ಎಲ್ಲಾ ಸೇರಿ ಪತ್ರ ಕೊಟ್ರು ನಿಜ. ಅವತ್ತಿಂದ ಇವತ್ತಿನ ವರೆಗೂ ಸಹ ,ಚಿಂತನೆ ಮಾಡಿ ಬೇರೆ ಬೇರೆ ರಾಜ್ಯಗಳ ಮಸೂದೆ ನೋಡಿ. ಅದರ ಹಿನ್ನೆಲೆಯಲ್ಲಿ ಇದನ್ನು ನಾವು ಮಸೂದೆ ತಂದಿರೋದು ನೂರಕ್ಕೆ ನೂರು ನಿಜ. ನೀವು ಕಾಂಗ್ರೆಸ್ ಗೆ ಒಪ್ಪಿಗೆ ಇರೋದು ಬಿಡೋದು‌ ಬೇರೆ ವಿಷಯ ಎಂದರು.


ಸಿದ್ದರಾಮಯ್ಯಗೆ BSY ಸವಾಲು

ಆದರೆ ಒಂದು ಮಾತ್ರ ಮರೀಬಾರದು, ನೀವು ಸಿಎಂ ಆದಾಗ ಸ್ಪೀಕರ್ ಕೊಠಡಿಯಲ್ಲಿ ದಾಖಲೆ ನೋಡಿಕೊಂಡು ಬಂದ್ರಿ, ನೀವು ಮಸೂದೆ ತರಲು ಸಹಿ ಮಾಡಿದ್ದು ಸತ್ಯಾನಾ ಸುಳ್ಳಾ ಬಹಿರಂಗ ಪಡಿಸಿ ಎಂದು ಸಿದ್ದರಾಮಯ್ಯಗೆ ಮಾಜಿ ಸಿಎಂ ಯಡಿಯೂರಪ್ಪ ಸವಾಲು ಹಾಕಿದರು. ಯಾಕ್ರೀ ರಾಜಕೀಯ ದೊಂಬರಾಟ ಮಾಡ್ತೀರಾ ಎಂದು ಪ್ರಶ್ನಿಸಿದರು. ಈ ವೇಳೆ ಯಡಿಯೂರಪ್ಪ ಜೊತೆ ನಿಂತು ಸಿದ್ದರಾಮಯ್ಯ ವಿರುದ್ಧ ಸಚಿವರು ವಾಗ್ದಾಳಿ ಮಾಡಿದರು.

ಮತಾಂತರ ನಿಷೇಧ ವಿಧೇಯಕದಲ್ಲಿ ಇರುವ ಪ್ರಮುಖ ಅಂಶಗಳೇನು?

>ಬಲವಂತ, ವಂಚನೆ, ಒತ್ತಾಯ ಹಾಗೂ ಆಮಿಷದ ಮೂಲಕ ನಡೆಸುವ ಮತಾಂತರ ಹಾಗೂ ಮದುವೆಯಾಗುವ ಭರವಸೆಯ ಮೂಲಕ ನಡೆಸುವ ಮತಾಂತರಕ್ಕೆ ನಿಷೇಧವಿದೆ.‌

>ವ್ಯಕ್ತಿಯು ಆತನ ನಿಕಟ ಪೂರ್ವ ಧರ್ಮಕ್ಕೆ ಮರು ಮತಾಂತರಗೊಂಡರೆ ಅದನ್ನು ಈ ಅಧಿನಿಯಮದ ಅಡಿಯಲ್ಲಿ ಮತಾಂತರವೆಂದು ಪರಿಗಣಿಸಲಾಗುವುದಿಲ್ಲ

>ಮತಾಂತರಗೊಂಡ ವ್ಯಕ್ತಿಯ ಪೋಷಕರು, ಸಹೋದರ, ಸಹೋದರಿ, ಸಹವರ್ತಿ ಅಥವಾ ಸಹೋದ್ಯೋಗಿಗಳಿಗೂ ಮತಾಂತರದ ಬಗ್ಗೆ ದೂರನ್ನು ನೀಡಿದರೆ ಎಫ್ ಐಆರ್ ದಾಖಲಿಸುವ ಅವಕಾಶವಿದೆ.

>ಬಲವಂತದ ಮತಾಂತರಕ್ಕೆ ಮೂರು ವರ್ಷದಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಇಪ್ಪತ್ತೈದು ಸಾವಿರ ರೂಪಾಯಿಗಳ ದಂಡ‌ ವಸೂಲಾತಿಗೆ ಅವಕಾಶವಿದೆ.

>ಅಪ್ರಾಪ್ತ ವ್ಯಕ್ತಿ, ಮಹಿಳೆ, ಎಸ್ ಸಿ, ಎಸ್ ಟಿ ಸೇರಿದ ವ್ಯಕ್ತಿಯ ಬಲವಂತದ ಮತಾಂತರಕ್ಕೆ ಮೂರು ವರ್ಷದಿಂದ ಹತ್ತು ವರ್ಷಗಳ ವರೆಗೆ ಜೈಲು ಶಿಕ್ಷೆಗೆ ಕಾಯ್ದೆಯಲ್ಲಿ ಅವಕಾಶವಿದೆ. ಅಷ್ಟೇ ಅಲ್ಲದೆ 50 ಸಾವಿರ ದಂಡ ವಸೂಲಿಗೂ ಅವಕಾಶವಿದೆ.

>ಮತಾಂತರಕ್ಕೆ ಬಲಿಯಾದವರಿಗೆ ಆಪಾದಿತನಿಂದ ಸಂದಾಯವಾಗುವಂತೆ ಗರಿಷ್ಠ ಐದು ಲಕ್ಷ ರೂಪಾಯಿ ಪರಿಹಾರ ಕೊಡಿಸಲು ಅವಕಾಶ ಕಲ್ಪಿಸಲಾಗಿದೆ.

>ಅಪರಾಧ ಪುನರಾವರ್ತನೆ ಆದಲ್ಲಿ ಐದು ವರ್ಷ ಜೈಲು ಶಿಕ್ಷೆ ಹಾಗೂ ಎರಡು ಲಕ್ಷ ದಂಡ ವಸೂಲಿಗೂ ಅವಕಾಶವಿದೆ.

>ಮತಾಂತರದ ಉದ್ದೇಶದ ಆದ ಮದುವೆಯನ್ನು ಅಸಿಂಧುವೆಂದು ಘೋಷಿಸಲು ನ್ಯಾಯಾಲಯಕ್ಕೆ ಅವಕಾಶ ನೀಡಲಾಗಿದೆ.

أحدث أقدم