ದಕ್ಷಿಣ ಕನ್ನಡ: ನಿರ್ಬಂಧ ಮತ್ತೆ 2 ದಿನ ವಿಸ್ತರಣೆ

ದಕ್ಷಿಣ ಕನ್ನಡ: ನಿರ್ಬಂಧ ಮತ್ತೆ 2 ದಿನ ವಿಸ್ತರಣೆ 

ಮಂಗಳೂರು
: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಹತ್ಯೆಗಳು ನಡೆದ ಬೆನ್ನಲ್ಲೇ ಜಿಲ್ಲಾಡಳಿತವು ಮುಂಜಾಗ್ರತಾ ಕ್ರಮವಾಗಿ ಸಂಜೆ 6ರಿಂದ ಬೆಳಿಗ್ಗೆ 6 ಗಂಟೆವರೆಗೆ ವ್ಯಾಪಾರ ವಹಿವಾಟು ನಡೆಸುವುದಕ್ಕೆ ಹಾಗೂ ಅನಗತ್ಯ ವಾಹನ ಸಂಚಾರಕ್ಕೆ ವಿಧಿಸಿದ್ದ ನಿರ್ಬಂಧವನ್ನು ಮತ್ತೆ ಎರಡು ದಿನಗಳ ಕಾಲ ವಿಸ್ತರಿಸಲಾಗಿದೆ.

'ಮಂಗಳೂರು ನಗರ ಪೊಲಿಸ್‌ ಕಮಿಷನರೇಟ್‌ನಿಂದ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೋಲೀಸರಿಂದ ಬಂದ ಕೋರಿಕೆ ಮೇರೆಗೆ ನಿರ್ಬಂಧಗಳನ್ನು ಮತ್ತೆ ಎರಡು ದಿನಗಳವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ' ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.


ಆಸ್ಪತ್ರೆ, ಔಷಧ ಅಂಗಡಿ, ಹೋಟೆಲ್, ಪಾರ್ಸೆಲ್ ಮತ್ತಿತರ ಅಗತ್ಯ ಸೇವೆಗಳಿಗೆ ನಿರ್ಬಂಧದಿಂದ ವಿನಾಯಿತಿ ಇದೆ. ತುರ್ತು ಮತ್ತು ಅವಶ್ಯಕ ಕಾರ್ಯಗಳ ಹೊರತಾಗಿ ಜನರು ನಿರ್ಬಂಧಿತ ಅವಧಿಯಲ್ಲಿ ಮನೆಯಿಂದ ಹೊರಗಿರಬಾರದು. ಅನಗತ್ಯವಾಗಿ ಬೀದಿಗಳಲ್ಲಿ ಸಂಚರಿಸಬಾರದು. ತುರ್ತು ಸಂದರ್ಭಗಳಲ್ಲಿ ಬಸ್‌, ಆಟೋರಿಕ್ಷಾ ಮತ್ತು ಟ್ಯಾಕ್ಸಿ ಸಂಚಾರಕ್ಕೆ ಅವಕಾಶವಿದೆ. ದೂರದ ಊರುಗಳಿಗೆ ಪ್ರಯಾಣಿಸುವವರು ಪೊಲೀಸರಿಗೆ ವಿವರ ನೀಡಿ ಪ್ರಯಾಣಿಸಬಹುದು. ನಿಗದಿಯಾಗಿರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಂದೂಡಬೇಕು. ಅಹಿತಕರ ಘಟನೆ ತಡೆಯುವ ಉದ್ದೇಶದಿಂದ ಈ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಯವರು ಜುಲೈ 29ರಂದು ಹೊರಡಿಸಿದ್ದ ಆದೇಶದಲ್ಲಿ ಸೂಚಿಸಿದ್ದರು.

أحدث أقدم