ಕೆಲವೊಮ್ಮೆ ಸರಕಾರಗಳು ಒಂದೇ ದಿನಕ್ಕೆ ಉರುಳುತ್ತದೆ: ಮಮತಾ ಸ್ಫೋಟಕ ಹೇಳಿಕೆ

ಕೆಲವೊಮ್ಮೆ ಸರಕಾರಗಳು ಒಂದೇ ದಿನಕ್ಕೆ ಉರುಳುತ್ತದೆ: ಮಮತಾ ಸ್ಫೋಟಕ ಹೇಳಿಕೆ


ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ವಿರುದ್ಧ ಈ ಬಾರಿ ದೊಡ್ಡ ಮುನ್ನಡೆ ಸಾಧಿಸಿದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಕೇಂದ್ರದಲ್ಲಿ ಇಂಡಿಯಾ ಬಣವು ಶೀಘ್ರದಲ್ಲೇ ಅಧಿಕಾರ ವಹಿಸಿಕೊಳ್ಳಬಹುದು ಎಂಬ ಸುಳಿವು ನೀಡಿದ್ದಾರೆ. “ಕೆಲವೊಮ್ಮೆ ಸರ್ಕಾರಗಳು ಕೇವಲ ಒಂದೇ ದಿನಕ್ಕೆ ಉರುಳುತ್ತದೆ ” ಎಂದು ಹೇಳಿದ್ದಾರೆ.


ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಒಂದು ದಿನ ಮೊದಲು ಶನಿವಾರ ತೃಣಮೂಲ ಸಂಸದೀಯ ಪಕ್ಷದ ಸಭೆಯ ನಂತರ ಮಾತನಾಡಿದ ಬ್ಯಾನರ್ಜಿ, “ಕಾನೂನು ಬಾಹಿರವಾಗಿ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ದವಾಗಿ ಸರ್ಕಾರ ರಚನೆಯಾಗುತ್ತಿರುವ ಕಾರಣ ತಮ್ಮ ಪಕ್ಷವು ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ" ಎಂದು ಹೇಳಿದರು.

ಪಿಎಂ ಮೋದಿ ಮತ್ತು ಬಿಜೆಪಿ ಈ ಬಾರಿ ಮಿತ್ರಪಕ್ಷಗಳ – ವಿಶೇಷವಾಗಿ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮತ್ತು ನಿತೀಶ್ ಕುಮಾರ್ ಅವರ ಜೆಡಿಯು ಮೇಲೆ ಅವಲಂಬಿತವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಕೇವಲ 240 ಲೋಕಸಭಾ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ, ಬಹುಮತಕ್ಕೆ 32 ರಷ್ಟು ಕಡಿಮೆಯಾಗಿದೆ. ಆದರೆ ಎನ್ ಡಿಎ ಮೈತ್ರಿಕೂಟ ಬಹುಮತ ಸಾಧಿಸಿದೆ.


“400 ಲೋಕಸಭಾ ಸ್ಥಾನಗಳ ಬಗ್ಗೆ ಮಾತನಾಡುವವರಿಗೆ ಸ್ವಂತವಾಗಿ ಸರಳ ಬಹುಮತವನ್ನು ಪಡೆಯಲು ಸಾಧ್ಯವಾಗಲಿಲ್ಲ. ಇಂಡಿಯಾ ಬಣ (ಸರ್ಕಾರ ರಚನೆಗೆ) ಹಕ್ಕು ಸಾಧಿಸದ ಕಾರಣ ಏನೂ ಆಗುವುದಿಲ್ಲ ಎಂದು ಯೋಚಿಸಬೇಡಿ. ನಾವು ಕಾಯುತ್ತಿದ್ದೇವೆ. ಏಕೆಂದರೆ ಅಂತಿಮವಾಗಿ ಹೊಸ ಇಂಡಿಯಾ ಸರ್ಕಾರ ಬರಲಿದೆ, ಕೆಲವೊಮ್ಮೆ ಸರ್ಕಾರಗಳು ಕೆಲವು ದಿನಗಳವರೆಗೆ ಮಾತ್ರ ಇರುತ್ತವೆ … ಏನು ಬೇಕಾದರೂ ಆಗಬಹುದು, ಯಾರಿಗೆ ಗೊತ್ತು.., ಈ ಸರ್ಕಾರವು 15 ದಿನಗಳಲ್ಲೇ ಅಂತ್ಯವಾಗಬಹುದು" ಎಂದು ಮಮತಾ ಹೇಳಿದರು.

ಬಿಜೆಪಿಯ ಮೇಲಿನ ತನ್ನ ದಾಳಿಯನ್ನು ಮುಂದುವರಿಸುತ್ತಾ, ಮಮತಾ ಬ್ಯಾನರ್ಜಿ, ಪೌರತ್ವ ತಿದ್ದುಪಡಿ ಕಾಯ್ದೆ (CAA) ಸೇರಿದಂತೆ “ವಿವೇಚನಾರಹಿತ ಶಕ್ತಿ ಬಳಸಿ ಜಾರಿಗೆ ತಂದ ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ಹೇಳಿದರು.


ಪ್ರಮಾಣವಚನ ಕಾರ್ಯಕ್ರಮಕ್ಕೆ ಗೈರು

ನರೇಂದ್ರ ಮೋದಿ ಅವರು ಭಾನುವಾರ ಪ್ರಮಾಣ ವಚನ ಸ್ವೀಕರಿಸಲಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ಟಿಎಂಸಿ ನಿರ್ಧರಿಸಿದೆ ಎಂಬುದಾಗಿ ಮಮತಾ ಬ್ಯಾನರ್ಜಿ ಹೇಳಿದರು. 'ಕಾನೂನುಬಾಹಿರ ಹಾಗೂ ಪ್ರಜಾಸತ್ತಾತ್ಮಕವಲ್ಲದ ಮಾರ್ಗದ ಮೂಲಕ ಎನ್‌ಡಿಎ ಸರ್ಕಾರ ರಚಿಸುತ್ತಿದೆ. ಹಾಗಾಗಿ, ಪ್ರಮಾಣವಚನ ಕಾರ್ಯಕ್ರಮದಲ್ಲಿ ಟಿಎಂಸಿ ಭಾಗವಹಿಸಲ್ಲ' ಎಂದಿದ್ದಾರೆ.

ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾರತದ ಏಳು ನೆರೆಯ ರಾಷ್ಟ್ರಗಳ ನಾಯಕರು ಭಾಗಿಯಾಗಲಿದ್ದಾರೆ. ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು, ಸೆಶೆಲ್ಸ್‌ನ ಉಪಾಧ್ಯಕ್ಷ ಅಹ್ಮದ್ ಅಫೀಫ್; ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ; ಮಾರಿಷಸ್‌ನ ಪ್ರಧಾನ ಮಂತ್ರಿ, ಪ್ರವಿಂದ್ ಕುಮಾರ್ ಜುಗ್ನೌತ್; ನೇಪಾಳದ ಪ್ರಧಾನಿ, ಪುಷ್ಪ ಕಮಲ್ ದಹಲ್ 'ಪ್ರಚಂಡ' ಮತ್ತು ಭೂತಾನ್ ಪ್ರಧಾನಿ, ತ್ಶೆರಿಂಗ್ ಟೊಬ್ಗೇ ಉಪಸ್ಥಿತರಿರಲಿದ್ದಾರೆ.


(ವರದಿ)

Previous Post Next Post