ಹಾನಗಲ್, ಸಿಂದಗಿ ಉಪಚುನಾವಣೆ ಫಲಿತಾಂಶ ಇಂದು

ಹಾನಗಲ್, ಸಿಂದಗಿ ಉಪಚುನಾವಣೆ ಫಲಿತಾಂಶ ಇಂದು

ಬೆಂಗಳೂರು:
 ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆಯ ಮತ ಎಣಿಕೆ ಇಂದು (ನ.2) ನಡೆಯಲಿದೆ. ವಿಜಯಪುರ ಜಿಲ್ಲೆಯ ಸಿಂದಗಿ ಹಾಗೂ ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಇಂದು ಮಂಗಳವಾರ ನಡೆಯಲಿದೆ.

ಈಗಾಗಲೇ ಎರಡು ಕ್ಷೇತ್ರಗಳ ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಯಾರಿಗೆ ಗೆಲುವು ಸಿಗುತ್ತದೆ ಎಂಬುದರ ಬಗ್ಗೆ ಭಾರೀ ಕುತೂಹಲ ಮೂಡಿಸಿದೆ.


ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಅ.30ರಂದು ಉಪಚುನಾವಣೆ ನಡೆದಿತ್ತು. ಕೋವಿಡ್(COVID-19) ಹಿನ್ನೆಲೆ 12 ಗಂಟೆಗಳ ಕಾಲ (ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆವರೆಗೆ) ನಡೆದ ಮತದಾನ ಪ್ರಕ್ರಿಯೆಯಲ್ಲಿ ಹಾನಗಲ್ ನಲ್ಲಿ ದಾಖಲೆಯ ಶೇ.83.76ರಷ್ಟು ಮತ್ತು ಸಿಂದಗಿಯಲ್ಲಿ ಶೇ.69.41ರಷ್ಟು ಮತದಾನವಾಗಿತ್ತು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.


ಸಿಂದಗಿ

ಜೆಡಿಎಸ್‌ನಿಂದ ನಾಜಿಯಾ ಶಕೀಲ ಅಂಗಡಿ, ಕಾಂಗ್ರೆಸ್‌-ಅಶೋಕ್ ಮನಗೂಳಿ, ಬಿಜೆಪಿ- ರಮೇಶ್ ಭೂಸನೂರ ಕಣದಲ್ಲಿದ್ದು, ಯಾರಿಗೆ ಗೆಲುವು ಸಿಗಲಿದೆ ಎನ್ನುವುದು ಕಾದುನೋಡಬೇಕಿದೆ.


ಹಾನಗಲ್

ಜೆಡಿಎಸ್‌ನಿಂದ ನಿಯಾಜ್ ಶೇಖ್, ಕಾಂಗ್ರೆಸ್‌-ಶ್ರೀನಿವಾಸ್ ಮಾನೆ ಹಾಗೂ ಬಿಜೆಪಿಯಿಂದ ಶಿವರಾಜ್ ಸಜ್ಜನ್ ಕಣಕ್ಕಿಳಿದಿದ್ದು, ಮಾನೆ ಹಾಗೂ ಸಜ್ಜನ್ ನಡುವೆ ತೀವ್ರ ಪೈಪೋಟಿ ಇದೆ. ಅಂತಿಮವಾಗಿ ಯಾರು ಗೆಲ್ಲುತ್ತಾರೆ ಎನ್ನುವುದು ಕುತೂಹಲ ಕೆರಳಿಸಿದೆ.


ಬಿಜೆಪಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಸಚಿವರೆಲ್ಲರೂ ಸೇರಿದಂತೆ ಅನೇಕ ಬಿಜೆಪಿ ನಾಯಕರು ಪ್ರಚಾರ ಕಣದಲ್ಲಿ ಪಾಲ್ಗೊಂಡಿದ್ದರು. ಇನ್ನು ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ನಾಯಕರು ಅಖಾಡಕ್ಕಿಳಿದಿದ್ದರು. ಜೆಡಿಎಸ್ ಪರವಾಗಿ ಎಚ್​.ಡಿ. ಕುಮಾರಸ್ವಾಮಿ, ಎಚ್.ಡಿ. ದೇವೇಗೌಡ ಸೇರಿದಂತೆ ಬೆರಳೆಣಿಕೆಯ ಶಾಸಕರು ಮಾತ್ರ ಪ್ರಚಾರ ಮಾಡಿದ್ದರು.


أحدث أقدم